ಶನಿವಾರ, ಫೆಬ್ರವರಿ 16, 2013

ಅಲ್ಪಸಂಖ್ಯಾತರ ವಿಶ್ವವಿದ್ಯಾಲಯಕ್ಕೆ ರೆವರೆಂಡ್ ಫರ್ಡಿನ್ಯಾಂಡ್ ಕಿಟ್ಟೆಲ್ ಅವರ ಹೆಸರನ್ನಿಡಬೇಕು. 'ದೇಶದಲ್ಲಿ ಅಲ್ಪಸಂಖ್ಯಾತರೆಂದರೆ ಕೇವಲ ಮುಸ್ಲಿಮರಷ್ಟೇನಾ?


ಮಂಗಳೂರು, ಫೆ. 16: ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಅಲ್ಪಸಂಖ್ಯಾತರ ವಿಶ್ವವಿದ್ಯಾಲಯಕ್ಕೆ ಕನ್ನಡದ ಬಗ್ಗೆ ವಿಶೇಷ ಒಲವನ್ನು ಹೊಂದಿದ್ದ ರೆವರೆಂಡ್ ಫರ್ಡಿನ್ಯಾಂಡ್ ಕಿಟ್ಟೆಲ್ ಅವರ ಹೆಸರನ್ನಿಡಬೇಕು ಎಂದು ಕೆಥೋಲಿಕ್ ಕ್ರೈಸ್ತ ಪರ ಸಂಘಟನೆಗಳ ಒತ್ತಾಯಕ್ಕೆ ಮತ್ತಷ್ಟು ಬಲ ಬಂದಿದೆ.ಅಲ್ಪಸಂಖ್ಯಾತರಿಗೆ ಪ್ರತ್ಯೇಕ ವಿವಿಗೆ ಟಿಪ್ಪು ಸುಲ್ತಾನ್ ಹೆಸರಿಡುವುದೆಂದರೆ ಕ್ರೈಸ್ತರಿಗೆ ಗಾಯದ ಮೇಲೆ ಬರೆ ಎಳೆದಂತೇ ಸರಿ ಎಂದು ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಟಿಜೆ ಅಬ್ರಹಾಂ ಅವರು ವ್ಯಾಖ್ಯಾನಿಸಿದ್ದಾರೆ'ಶಿಕ್ಷಣ ಕ್ಷೇತ್ರಕ್ಕೆ ಕ್ರೈಸ್ತರ ಕೊಡುಗೆ ಅಪಾರ. ಕ್ರೈಸ್ತರನ್ನು ವಿರೋಧಿಸುವವರೂ ಇದನ್ನು ಒಪ್ಪುತ್ತಾರೆ. ಆದರೆ, ಅಲ್ಪಸಂಖ್ಯಾತರ ವಿವಿ ಸ್ಥಾಪನೆ ವಿಷಯ ಬಂದಾಗ ಕೇಂದ್ರ ಸರಕಾರ ಸೌಜನ್ಯಕ್ಕಾದರೂ ಕ್ರೈಸ್ತರನ್ನು ಪರಿಗಣಿಸದಿರುವುದು ಖಂಡನೀಯ' ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.'ಕೇಂದ್ರ ಸರಕಾರ ಅಲ್ಪಸಂಖ್ಯಾತರಿಗಾಗಿ ಪ್ರತ್ಯೇಕ ವಿವಿ ಸ್ಥಾಪನೆಗೆ ಮುಂದಾಗಿರುವುದು ಸ್ವಾಗತಾರ್ಹ. ಆದರೆ ಟಿಪ್ಪು ಸುಲ್ತಾನ್ ಹೆಸರಿಡುವುದು ಸರಿಯಲ್ಲ' ಎಂದು ಮತ್ತೊಮ್ಮೆ ಅವರು ಪ್ರತಿಪಾದಿಸಿದ್ದಾರೆ.'ದೇಶದಲ್ಲಿ ಅಲ್ಪಸಂಖ್ಯಾತರೆಂದರೆ ಕೇವಲ ಮುಸ್ಲಿಮರಷ್ಟೇನಾ? ಬರೀ ಮತ ಬ್ಯಾಂಕ್ ರಾಜಕಾರಣ ಇವರದು. ಅದೇ ಟಿಪ್ಪು ಬದಲು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಹೆಸರನ್ನಿಡಲು ಕೇಂದ್ರ ಸರಕಾರ ಸಮಾಲೋಚಿಸಿದ್ದರೆ ನಾವೇ ಅಲ್ಲ, ಹಿಂದೂಗಳೂ ವಿರೋಧ ವ್ಯಕ್ತಪಡಿಸುತ್ತಿರಲಿಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ.'ಶ್ರೀರಂಗಪಟ್ಟಣ ಕ್ರೈಸ್ತರಿಗೆ ಅವಮಾನದ ಸ್ಥಳ. ಟಿಪ್ಪು ಸುಲ್ತಾನ್ ತನ್ನ ಆಳ್ವಿಕೆ ಅವಧಿಯಲ್ಲಿ ಕರಾವಳಿ ಪ್ರದೇಶದಲ್ಲಿದ್ದ ಕ್ರೈಸ್ತರನ್ನು ಸೆರೆ ಹಿಡಿದು ಶ್ರೀರಂಗಪಟ್ಟಣಕ್ಕೆ ಕರೆ ತರುತ್ತಿದ್ದ. ಬಳಿಕ ಅವರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುತ್ತಿದ್ದ ಎಂದು ಸ್ವತಃ ಟಿಪ್ಪುವಿನ ಪುತ್ರ ಗುಲಾಂ ಮೊಹಮ್ಮದ್ ತನ್ನ ಕೃತಿಯಲ್ಲಿ ಬಹಿರಂಗಪಡಿಸಿದ್ದಾನೆ. ಹಾಗಾಗಿ ಶ್ರೀರಂಗಪಟ್ಟಣ ಕ್ರೈಸರಿಗೆ ನೋವು ತರುವ ಸ್ಥಳ. ಕ್ರೈಸ್ತರನ್ನು ಅವಮಾನಿಸಿ, ಮತಾಂತರಗೊಳಿಸಿದ ಸ್ಥಳದಲ್ಲಿ ಸ್ಥಾಪನೆಯಾಗುವ ವಿವಿಗೆ ಟಿಪ್ಪು ಸುಲ್ತಾನ್ ಹೆಸರಿಡಲು ಅವಕಾಶ ನೀಡುವುದಿಲ್ಲ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.'ಟಿಪ್ಪು ಸುಲ್ತಾನ್ ಮಹಾನ್ ಹೋರಾಟಗಾರನಿರಬಹುದು. ಆದರೆ, ಶಿಕ್ಷಣ ಕ್ಷೇತ್ರಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ತಾನು ಜಯಿಸಿದ ಪ್ರದೇಶಗಳ ಹೆಸರನ್ನೂ ಬದಲಾಯಿಸಿದ್ದ. ಮೈಸೂರಿಗೆ ನಜರಾಬಾದ್ ಎಂಬ ಹೆಸರಿಟ್ಟಿದ್ದ. ಹಾಗೆಯೇ, ಹಲವು ಪ್ರದೇಶಗಳ ಹೆಸರು ಬದಲಿಸಿದ್ದ' ಎಂದು ಅವರು ಹೇಳಿದ್ದಾರೆ. 'ಕನ್ನಡಕ್ಕೆ ಪ್ರಥಮ ಇಂಗ್ಲಿಷ್- ಕನ್ನಡ ನಿಘಂಟು ನೀಡಿದ ಗೌರವಾನ್ವಿತ ಫರ್ಡಿನ್ಯಾಂಡ್ ಕಿಟ್ಟೆಲ್ ಅವರು ಭಾಷೆಗೆ ನೀಡಿದ ಕೊಡುಗೆ ಪ್ರಶ್ನಾತೀತ. ಹಾಗಾಗಿ ಉದ್ದೇಶಿತ ವಿವಿಗೆ ಕಿಟ್ಟೆಲ್ ಅವರ ಹೆಸರಿಡಬೇಕು. ಕುರಿತು ಶನಿವಾರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು' ಎಂದು ಅವರು ತಿಳಿಸಿದ್ದಾರೆ. 'ವಿವಿಗೆ ಟಿಪ್ಪು ಸುಲ್ತಾನ್ ಹೆಸರಿಡುವ ಪ್ರಸ್ತಾವದ ಹಿಂದೆ ರಾಜಕೀಯ ದುರುದ್ದೇಶವಿದೆ. ವೋಟ್ಬ್ಯಾಂಕ್ ಉದ್ದೇಶದಿಂದ ಕೇಂದ್ರ ಪ್ರಯತ್ನಕ್ಕೆ ಮುಂದಾಗಿದ್ದು, ಇದಕ್ಕೆ ಆಸ್ಪದ ನೀಡುವುದಿಲ್ಲ' ಎಂದು ಎಚ್ಚರಿಸಿದ್ದಾರೆ.

 

ಸೋಮವಾರ, ಫೆಬ್ರವರಿ 11, 2013

ರಾಜೀನಾಮೆ ಪ್ರಕಟಿಸಿದ ಕ್ಯಾಥೊಲಿಕ್ ಕ್ರೈಸ್ತರ ಪರಮಗುರು ಪೋಪ್,


ಮ್, ಫೆ.11: ಕ್ಯಾಥೊಲಿಕ್  ಕ್ರೈಸ್ತರ ಪರಮಗುರು ಪೋಪ್ ಬೆನೆಡಿಟ್ಕ್ XVI ಅವರು ಫೆಬ್ರವರಿ ತಿಂಗಳ ಅಂತ್ಯಕ್ಕೆ ತನ್ನ ಹುದ್ದೆ ತ್ಯಜಿಸಲಿದ್ದಾರೆ ಎಂದು ರೋಮ್ ಪೋಪ್ ಕಚೇರಿ ಸೋಮವಾರ(ಫೆ.11) ಪ್ರಕಟಿಸಿದೆ. ಪೋಪ್ ಹುದ್ದೆ ತ್ಯಜಿಸುವ ಬಗ್ಗೆ ಸ್ವತಃ ಪೋಪ್ ಬೆನೆಡಿಕ್ಟ್ ಅವರು ಘೋಷಣಾ ಪತ್ರ ಹೊರಡಿಸಿದ್ದಾರೆ. ಅನಾರೋಗ್ಯದ ಕಾರಣ ಹುದ್ದೆಯಲ್ಲಿ ಮುಂದುವರೆಯಲು ಸಾಧ್ಯವಾಗುತ್ತಿಲ್ಲ ಎಂದು ಪೋಪ್ ಹೇಳಿದ್ದಾರೆ. ಹೊಸ ಪೋಪ್ ಹುಡುಕಾಟದಲ್ಲಿ ತೊಡಗಿರುವ ವ್ಯಾಟಿಕನ್ ಸಿಟಿ, ಆದಷ್ಟು ಬೇಗ ಹೊಸ ಪೋಪ್ ಆಯ್ಕೆ ಮಾಡಲಾಗುವುದು ಎಂದಿದೆ. ಬವಾರಿಯಾ ಮೂಲದ ಕಾರ್ಡಿನಲ್ ಜೋಸೆಫ್ ಅಲೋಸಿಯಸ್ ರಾಜ್ನಿಗರ್ ಅವರು 2005, ಏಪ್ರಿಲ್ 19 ರಂದು ಪೋಪ್ ಹುದ್ದೆಗೇರಿದ್ದರು. ಪೋಪ್ ನೀಡಿರುವ ಪ್ರಕಟನೆಯ ಪೂರ್ಣ ಪಾಠ ಇಲ್ಲಿದೆ ಹಾಗೂ ಆಡಿಯೋ ರೇಡಿಯೋ ವ್ಯಾಟಿಕನ್ ನಲ್ಲಿ ಲಭ್ಯವಿದೆ.. ಆಸಕ್ತರು ಕೇಳಿ, ಪೋಪ್ ವಿವಾದಗಳ ಹಿನ್ನೋಟ: ಕೃತಕ ಗರ್ಭಧಾರಣೆಗೆ ಪೋಪ್ ರೆಡ್ ಸಿಗ್ನಲ್: ಕೃತಕ ಗರ್ಭಧಾರಣೆ ಮೂಲಕ ಹಣ ಮಾಡುವ ಪ್ರವೃತ್ತಿಯನ್ನು ಕೈ ಬಿಡಬೇಕು. ಇದರಿಂದ ಸಿಗುವ ಸುಲಭದ ಗಳಿಕೆ ಪಾಪದ ಸಾಲಿಗೆ ಸೇರುತ್ತದೆ ಎಂದು ಪೋಪ್ ಹೇಳಿದ್ದರು. ರೋಮ್ ಚರ್ಚ್ ಸಿಬ್ಬಂದಿಗಳು ವೀರ್ಯದಾನ ಮಾಡುವುದನ್ನು ನಿಷೇಧಿಸಲಾಗಿತ್ತು. ಆದರೆ, ಬಂಜೆತನ ಹೋಗಲಾಡಿಸಲು ನಡೆಯುತ್ತಿರುವ ಸಂಶೋಧನೆಗೆ ವ್ಯಾಟಿಕಾನ್ ಚರ್ಚ್ ಬೆಂಬಲ ವ್ಯಕ್ತಪಡಿಸಿದ್ದು ವಿರೋಧಾಭಾಸವಾಗಿತ್ತು. ಕ್ಯಾಥೊಲಿಕ್ ಕ್ರೈಸ್ತರ  ಪರಮ ಗುರು ಪೋಪ್ ಬೆನೆಡಿಕ್ಟ್ XVI ಹಾಗೂ ಈಜಿಪ್ಟಿನ ಇಮಾಮ್ ತುಟಿಗೆ ತುಟಿ ಒತ್ತಿರುವ ಚಿತ್ರವನ್ನು ಬೆನೆಟ್ಟನ್ ಸಂಸ್ಥೆ ದುರ್ಬಳಕೆ ಮಾಡಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. 2009ರಲ್ಲಿ ಆಫ್ರಿಕಾ ಭೇಟಿ ವೇಳೆ, ಏಡ್ಸ್ ಸಮಸ್ಯೆಗೆ ಕಾಂಡೊಮ್ ಪರಿಹಾರವಲ್ಲ. ಆದರೆ ಅದು ಪ್ರತಿಕೂಲ ಸ್ಥಿತಿಯನ್ನು ಹೆಚ್ಚಿಸುತ್ತದೆ ಎಂಬ ಬೆನೆಡಿಕ್ಟ್ ಹೇಳಿಕೆಗೆ ಯೂರೋಪಿಯನ್ ದೇಶಗಳು ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಸಂಘಟನೆಗಳು ಹಾಗೂ ವಿಜ್ಞಾನಿಗಳಿಂದ ತೀವ್ರ ವಿರೋಧ ವ್ಯಕ್ತಗೊಂಡಿತ್ತು. ಅಮೆರಿಕದ ಕ್ಯಾಥೊಲಿಕ್ ಮಹಿಳಾ ಪಾದ್ರಿಯೊಬ್ಬರು ಬರೆದಿರುವ ಪುಸ್ತಕವು ಹಸ್ತಮೈಥುನ, ಸಲಿಂಗಕಾಮ ಮತ್ತು ವಿಚ್ಛೇಧನದಂತಹ ವಿಷಯದ ಬಗ್ಗೆ ಪೋಪ್ ಕಿಡಿಕಾರಿದ್ದರು.